
ಗಾಂಧಿ ಇಂದಿಗೂ ಪ್ರಸ್ತುತ ಎನ್ನುವ ಮಾತಿದೆ.ಆದರೆ ಇತ್ತೀಚಿನ ಘಟನೆಗಳು ಇದಕ್ಕೆ ವ್ಯತಿರಿಕ್ತ ಅನ್ನಿಸುತ್ತದೆ.ಇದಕ್ಕೆ ಪೂರಕವಾಗಿ ನಿಂತದ್ದು ಮೊನ್ನೆ ನಡೆದ ಗಾಂಧಿ ಜಯಂತಿ ನಾಟಕ ಪ್ರದರ್ಶನ.ವಾಸ್ತವತೆಗೆ ಕನ್ನಡಿ ಹಿಡಿದ ನಾಟಕವನ್ನು ತೆಲುಗಿನಿಂದ ಕನ್ನಡಕ್ಕೆ ತರಲಾಗಿದೆ.ಗಾಂಧಿ,ಸ್ವಾತಂತ್ರ್ಯ ನಂತರದ ಭಾರತವನ್ನು ಕಂಡು ಆತಂಕಗೊಳ್ಳುವುದೇ ನಾಟಕದ ಕಥಾ ವಸ್ತು.
ಪ್ರಾರಂಭ
ಭಾರತಕ್ಕೆ ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ತಪ್ಪು ಮಾಡಿದರು.ಇದು ಮಹಾಪಾಪ,ಇದು ಯಮಲೋಕದಲ್ಲಿರುವ ಅಪಾದನೆ.ಚಿತ್ರಗುಪ್ತನ ಆರೋಪ.ಇದಕ್ಕಾಗಿ ಗಾಂಧೀಜಿಗೆ ಶಿಕ್ಷೆ ಕೂಡಾ ಪ್ರಾಪ್ತಿಯಾಗುತ್ತದೆ. ಮತ್ತೆ ಭೂಲೋಕದಲ್ಲಿ 1 ತಿಂಗಳ ಕಾಲ ಮಹಾತ್ಮ ಭೂಲೋಕದಲ್ಲಿ ಜೀವಿಸಬೇಕು. ಹೀಗೆ ಭೂಲೋಕದಲ್ಲಿ ಕಾಣಿಸಿಕೊಳ್ಳುವ ಗಾಂಧೀಜಿಯನ್ನು ಗಾಂಧಿ ಎಂದು ಒಪ್ಪಿಕೊಳ್ಳಲು ಯಾರು ಸಿದ್ಧರಿಲ್ಲ. ಹೀಗೆ ಮನುಜನ ಕರ್ಮಭೂಮಿಯು ಅನಾವರಣಗೊಳ್ಳುತ್ತ ಸಾಗುತ್ತದೆ.ರಾಜಕಾರಣಿಗಳ ಬೂಟಾಟಿಕೆ, ವಿಧಾನಸಭೆಯಲ್ಲಿ ಜನಪ್ರತಿನಿಧಿಗಳ ನಾಟಕ ಎಲ್ಲವೂ ಬಟ್ಟೆ ಕಳಚಿಕೊಳ್ಳುತ್ತದೆ.
ಅದೊಂದು ಚುನಾವಣೆಯ ಸಂದರ್ಭ ಗಾಂಧಿಯ ಬಳಿಗೆ ಬಂದ ಮತ ಭಿಕ್ಷುಕರು ಮತಕ್ಕಾಗಿ ತಟ್ಟೆ ಹಿಡಿಯುತ್ತಾರೆ.ಅವೆರೆಲ್ಲಾ ಹಿಂತಿರುಗಿದ ಬಳಿಕ ಗಾಂಧಿ ಪ್ರಶ್ನೆಯೊಂದನ್ನು ಕೇಳುತ್ತಾರೆ. 'ನನ್ನ ಹೆಸರೂ ಮತದಾರರ ಪಟ್ಟಿಯಲ್ಲಿ ಇದೆಯಾ.?' ಇದೊಂದು ಮಾತು ಸಾಕು ವಾಸ್ತವದ ನೆರಳಿಗೆ.ಮೊನ್ನೆ ಮೊನ್ನೆ ಚುನಾವಣಾ ಆಯೋಗ ನಡೆಸಿತಲ್ಲ ಮತದಾರರ ಪಟ್ಟಿ ಪರಿಷ್ಕರಣ ಯಾಗ ಇದು ನನ್ನ ಮನಸ್ಸಿನಲ್ಲಿ ತೇಲಿ ಹೋಯಿತು.
ಮುಖ್ಯವಾಗಿ ಹೊಲಸು ರಾಜಕೀಯದ ಬಗ್ಗೆಯೇ ನಾಟಕ ಬೆಳಕು ಚೆಲ್ಲುತ್ತದೆ. ಕಮಿಷನ್ ವ್ಯವಹಾರ, ಮತದಾನ ಅವ್ಯವಹಾರ ,
ಬಜೆಟ್ ಗಾರಿಕೆ ಹೀಗೆ ಬೆಳಕಿನ ಚೆಲ್ಲುತ್ತದೆ.ಕೊನೆಯಲ್ಲಿ ಎಲ್ಲಾ ಘಟನೆಗಳಿಗೂ ಗಾಂಧೀಜಿ ನಿರುತ್ತರರಾಗುತ್ತಾರೆ. ಚಿತ್ರಗುಪ್ತನ ಮಾತು ಅವರ ಕಿವಿಗೆ ಅಪ್ಪಳಿಸುತ್ತದೆ. ಒಟ್ಟಾರೆ ಈ ನಾಟಕ ನನಗೆ ತುಂಬಾ ಇಷ್ಟವಾಯಿತು. ಬೆಳಕು, ನಟನೆ ಇವೆಲ್ಲಾ ಹೊರತುಪಡಿಸಿ ಒಳಗಿನ ಹೂರಣವಿದೆಯಲ್ಲಾ ಅದು ಖುಷಿ ತಂದುಕೊಟ್ಟಿತು. ತುಂಬಾ ದಿನದ ನಂತರ ರವೀಂದ್ರ ಕಲಾಕ್ಷೇತ್ರ ಮನಸ್ಸಿಗೆ ಮುದ ನೀಡಿತು. ನನ್ನ ಸಂತೋಷವನ್ನು ಹಂಚಿಕೊಂಡಿದ್ದೇನೆ.